ಆಗಷ್ಟೇ ಬೆಳಗಿನ 6 ಗಂಟೆಗೆಲ್ಲ ಸರಣ್ಯ ಬಲರಾಮನ್ ಗುಮ್ಮಿಡಿಪೂಂಡಿಯಲ್ಲಿರುವ ತನ್ನ ಮನೆಯಿಂದ ಹೊರಡುತ್ತಾರೆ. ಚೆನ್ನೈ ಬಳಿಯ ತಿರುವಳ್ಳೂರು ಜಿಲ್ಲೆಯ ಈ ಸಣ್ಣ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ, ಅವರು ತಮ್ಮ ಮೂವರು ಮಕ್ಕಳೊಂದಿಗೆ ಲೋಕಲ್ ಟ್ರೇನ್ ಏರುತ್ತಾರೆ. ಸುಮಾರು ಎರಡು ಗಂಟೆಗಳ ನಂತರ ಅವರು 40 ಕಿಲೋಮೀಟರ್ ದೂರದಲ್ಲಿರುವ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲುಪುತ್ತಾರೆ. ಇಲ್ಲಿಂದ, ಈ ತಾಯಿ, ಮಕ್ಕಳು ಶಾಲೆಯನ್ನು ತಲುಪಲು ಸ್ಥಳೀಯ ರೈಲಿನಲ್ಲಿ ಇನ್ನೂ 10ರಿಂದ 12 ಕಿ.ಮೀ ಪ್ರಯಾಣಿಸುತ್ತಾರೆ.
ಸಂಜೆ 4 ಗಂಟೆಗೆ, ಪ್ರಯಾಣವು ಹಿಮ್ಮುಖವಾಗಿ ನಡೆಯುತ್ತದೆ, ಮತ್ತು ಅವರು ಮನೆಗೆ ಹಿಂದಿರುಗುವ ಹೊತ್ತಿಗೆ ಸಂಜೆ 7 ಗಂಟೆಯಾಗಿರುತ್ತದೆ.
ಮನೆಯಿಂದ ಶಾಲೆಗೆ ಮತ್ತು ಅಲ್ಲಿಂದ ಹಿಂತಿರುಗಲು 100 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣವನ್ನು ವಾರಕ್ಕೆ ಐದು ಬಾರಿ ಮಾಡಲಾಗುತ್ತದೆ. ಸರಣ್ಯ ಅವರ ಪಾಲಿಗೆ ಇದೊಂದು ಸಾಧನೆಯಾಗಿದೆ, ಅವರು ವಿವರಿಸುತ್ತಾರೆ: "ಈ ಹಿಂದೆ [ಅವರು ಮದುವೆಯಾಗುವ ಮೊದಲು], ಬಸ್ ಅಥವಾ ರೈಲನ್ನು ಎಲ್ಲಿ ಹತ್ತಬೇಕು ಅಥವಾ, ಎಲ್ಲಿ ಇಳಿಯಬೇಕು ಎನ್ನುವುದು ನನಗೆ ತಿಳಿದಿರಲಿಲ್ಲ."

ಚೆನ್ನೈ ಬಳಿಯ ಗುಮ್ಮಿಡಿಪೂಂಡಿ ರೈಲ್ವೆ ನಿಲ್ದಾಣದಲ್ಲಿ ಸರಣ್ಯ ಬಲರಾಮನ್ ತನ್ನ ಮಗಳು ಎಂ ಲೆಬನಾ ಜೊತೆ ಸ್ಥಲೋಕಲ್ ರೈಲಿಗಾಗಿ ಕಾಯುತ್ತಿದ್ದಾರೆ. ಅವರಿರುವ ಪ್ರದೇಶದಲ್ಲಿ ದೃಷ್ಟಿಹೀನ ಮಕ್ಕಳಿಗೆ ಕಲಿಸಬಲ್ಲ ಯಾವುದೇ ಶಾಲೆಗಳಿಲ್ಲದ ಕಾರಣ ಪ್ರತಿದಿನ ಶಾಲೆಗೆ ಮತ್ತು ಮನೆಗೆ ಸುಮಾರು 100 ಕಿಲೋಮೀಟರ್ ಪ್ರಯಾಣಿಸುತ್ತಾರೆ
ದೃಷ್ಟಿದೋಷದೊಡನೆ ಜನಿಸಿದ ತನ್ನ ಮೂವರು ಮಕ್ಕಳಿಗಾಗಿ ಸರಣ್ಯ ಹೋರಾಡುತ್ತಿದ್ದಾರೆ. ಅವರು ಮೊದಲ ಬಾರಿಗೆ ಹೊರಟಾಗ, ಮಾರ್ಗವನ್ನು ತೋರಿಸಲು ಮಾಮಿ (ವಯಸ್ಸಾದ ಮಹಿಳೆ) ತನ್ನೊಂದಿಗೆ ಬಂದರು ಎಂದು ಅವರು ಹೇಳುತ್ತಾರೆ. "ಮರುದಿನ, ನಾನು ಅವರನ್ನು ಮತ್ತೆ ನನ್ನೊಂದಿಗೆ ಬರುವಂತೆ ಕೇಳಿದಾಗ, ನನಗೆ ಕೆಲಸವಿದೆ ಎಂದು ಹೇಳಿದರು. ನಾನು ಅಳುತ್ತಿದ್ದೆ. ಪ್ರಯಾಣಿಸಲು ಹೆಣಗಾಡುತ್ತಿದ್ದೆ," ಎಂದು ಅವರು ತಮ್ಮ ಮಕ್ಕಳೊಂದಿಗಿನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾರೆ.
ಅವರು ತನ್ನ ಮೂವರು ಮಕ್ಕಳೂ ಔಪಚಾರಿಕ ಶಿಕ್ಷಣವನ್ನು ಪಡೆಯಬೇಕೆಂದು ನಿರ್ಧರಿಸಿದರು, ಆದರೆ ಮನೆಯ ಸಮೀಪ ದೃಷ್ಟಿಹೀನರಿಗೆ ಕಲಿಸಬಲ್ಲ ಯಾವುದೇ ಶಾಲೆಗಳಿರಲಿಲ್ಲ. “ನಮ್ಮ ಮನೆಯ ಹತ್ತಿರ ಒಂದು ದೊಡ್ಡ ಶಾಲೆ [ಖಾಸಗಿ] ಇದೆ. ನಾನು ಶಾಲೆಯವರ ಬಳಿ ಹೋಗಿ ನನ್ನ ಮಕ್ಕಳನ್ನು ಇಲ್ಲಿಗೆ ಸೇರಿಸಬಹುದೇ ಎಂದು ಕೇಳಿದೆ, ಆಗ ಅವರು ಶಾಲೆಯ ಇತರ ಮಕ್ಕಳು ನಿಮ್ಮ ಮಕ್ಕಳ ಕಣ್ಣಿಗೆ ಪೆನ್ಸಿಲ್ ಅಥವಾ ಬೇರೆ ಚೂಪಾದ ವಸ್ತುಗಳನ್ನು ಚುಚ್ಚಿದರೆ ಅದಕ್ಕೆ ನಾವು ಜವಾಬ್ದಾರರಾಗಲು ಸಾಧ್ಯವಿಲ್ಲ," ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡರು.
ಸರಣ್ಯ ಶಿಕ್ಷಕರ ಸಲಹೆ ಪಡೆದು ಅಂಧರ ಶಾಲೆ ಹುಡುಕಲು ಹೊರಟರು. ಚೆನ್ನೈಯಲ್ಲಿ ದೃಷ್ಟಿಯಿಲ್ಲದ ಮಕ್ಕಳಿಗಾಗಿ ಒಂದೇ ಒಂದು ಸರ್ಕಾರಿ ಶಾಲೆ ಇದೆ. ಇದು ಅವರ ಮನೆಯಿಂದ 40 ಕಿ.ಮೀ ದೂರದಲ್ಲಿರುವ ಪೂನಮಲ್ಲಿಯಲ್ಲಿದೆ (ಪೂನಮಲ್ಲೆ ಎಂದೂ ಸಹ ಉಚ್ಚರಿಸಲಾಗುತ್ತದೆ). ಆಕೆಯ ನೆರೆಹೊರೆಯವರು ತನ್ನ ಮಕ್ಕಳನ್ನು ನಗರದ ಖಾಸಗಿ ಶಾಲೆಗಳಿಗೆ ಸೇರಿಸುವಂತೆ ಸಲಹೆ ನೀಡಿದರು; ಅವರು ಶಾಲೆಗೆ ಭೇಟಿ ನೀಡಲು ನಿರ್ಧರಿಸಿದರು.

ತಮಿಳುನಾಡಿನ ಗುಮ್ಮಿಡಿಪೂಂಡಿಯಲ್ಲಿರುವ ಅವರ ಮನೆಯಲ್ಲಿ ಸರಣ್ಯ ತನ್ನ ಮೂವರು ಮಕ್ಕಳಾದ ಎಂ.ಮೇಷಕ್, ಎಂ.ಲೆಬಾನಾ ಮತ್ತು ಎಂ.ಮನಸೆ (ಎಡದಿಂದ ಬಲಕ್ಕೆ) ಅವರೊಂದಿಗೆ
"ಎಲ್ಲಿ ಹೋಗಬೇಕೆಂದು ನನಗೆ ತಿಳಿದಿರಲಿಲ್ಲ," ಅವರು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ. “ಮದುವೆಗೆ ಮುಂಚೆ ಮನೆಯಲ್ಲಿ ಹೆಚ್ಚು ಸಮಯ ಕಳೆದಿದ್ದ” ಯುವತಿ ಈಗ ಶಾಲೆಯ ಬೇಟೆಯಲ್ಲಿದ್ದಳು. "ಮದುವೆಯ ನಂತರವೂ ನನಗೆ ಒಬ್ಬಂಟಿಯಾಗಿ ಪ್ರಯಾಣಿಸುವುದು ಹೇಗೆಂದು ತಿಳಿದಿರಲಿಲ್ಲ," ಎಂದು ಅವರು ಹೇಳುತ್ತಾರೆ.
ದಕ್ಷಿಣ ಚೆನ್ನೈಯ ಅಡ್ಯಾರ್ನಲ್ಲಿ, ಸರಣ್ಯ ಸೇಂಟ್ ಲೂಯಿಸ್ ಇನ್ಸ್ಟಿಟ್ಯೂಟ್ ಫಾರ್ ದಿ ಡೆಫ್ ಅಂಡ್ ದಿ ಬ್ಲೈಂಡ್ ಎನ್ನುವ ಶಾಲೆಯನ್ನು ಕಂಡುಕೊಂಡರು; ಅವರು ತನ್ನ ಇಬ್ಬರು ಮಕ್ಕಳನ್ನು ಇಲ್ಲಿಗೆ ಸೇರಿಸಿದರು. ನಂತರ, ಅವರು ತಮ್ಮ ಮಗಳನ್ನು ಹತ್ತಿರದ ಜಿಎನ್ ಚೆಟ್ಟಿ ರಸ್ತೆಯಲ್ಲಿರುವ ಲಿಟಲ್ ಫ್ಲವರ್ ಕಾನ್ವೆಂಟ್ ಹೈಯರ್ ಸೆಕೆಂಡರಿ ಶಾಲೆಗೆ ಸೇರಿಸಿದರು. ಇಂದು ಹಿರಿಯ ಹುಡುಗ ಎಂ ಮೇಶಕ್ 8ನೇ ತರಗತಿ, ಎರಡನೇ ಮಗು ಎಂ ಮನಸೆ 6ನೇ ತರಗತಿ ಮತ್ತು ಕಿರಿಯ ಎಂ ಲೆಬಾನಾ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಆದರೆ ಅವರನ್ನುಶಾಲೆಗೆ ಕಳುಹಿಸುವುದು ಸುಲಭದ ಕೆಲಸವಲ್ಲ. ಅವರ ಶಾಲೆಯ ಪ್ರಯಾಣದಲ್ಲಿ ದೀರ್ಘ ರೈಲುಪ್ರಯಾಣ, ಆಯಾಸ ಕೆಲವೊಮ್ಮೆ ಆಘಾತಕಾರಿ ಅಂಶಗಳೂ ಸೇರಿರುತ್ತವೆ. ಹಿರಿಯ ಹುಡುಗ ಆಗಾಗ ಮೂರ್ಚೆ ಹೋಗುತ್ತಿರುತ್ತಾನೆ. “ಅವನಿಗೆ ಏನಾಗುತ್ತದೆಂದು ಗೊತ್ತಿಲ್ಲ. ಅವನಿಗೆ ಫಿಟ್ಸ್ ಬರುತ್ತಿತ್ತು. ಆಗ ಯಾರಿಗೂ ಕಾಣದಂತೆ ಅವನನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಳ್ಳುತ್ತಿದ್ದೆ. ಸ್ವಲ್ಪ ಸಮಯದ ನಂತರ ಅವನನ್ನು ಅಲ್ಲಿಂದ ಎತ್ತಿಕೊಂಡು ಹೋಗುತ್ತಿದ್ದೆ.” ಎಂದು ಅವರು ಹೇಳುತ್ತಾರೆ.
ಅವರ ಮಕ್ಕಳಿಗೆ ವಸತಿ ಶಾಲಾ ಶಿಕ್ಷಣವು ಒಂದು ಆಯ್ಕೆಯಾಗಿರಲು ಸಾಧ್ಯವಿರಲಿಲ್ಲ. ಆಕೆಯ ಹಿರಿಯ ಮಗನಿಗೆ ನಿಕಟ ಮೇಲ್ವಿಚಾರಣೆಯ ಅಗತ್ಯವಿದೆ. "ಅವನಿಗೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮೂರ್ಚೆ ರೋಗ ಬರುತ್ತದೆ," ಎಂದು ಅವರು ಹೇಳುತ್ತಾರೆ ಮತ್ತು "ನಾನು ಇಲ್ಲದಿದ್ದರೆ ನನ್ನ ಎರಡನೇ ಮಗು ಏನನ್ನೂ ತಿನ್ನುವುದಿಲ್ಲ," ಎಂದು ಹೇಳುತ್ತಾರೆ.

ಸರಣ್ಯ ತನ್ನ ತಂದೆ ಬಲರಾಮನ್ ಆರ್ (ಎಡ) ಸಹಾಯದಿಂದ ತನ್ನ ಮಕ್ಕಳಿಗೆ ಆಹಾರವನ್ನು ತಿನ್ನಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಕುಟುಂಬದ ಏಕೈಕ ಸಂಪಾದನೆ ಹೊಂದಿರುವ ಸದಸ್ಯರಾಗಿದ್ದಾರೆ
*****
17 ವರ್ಷ ತುಂಬುವ ಮುನ್ನವೇ ಶರಣ್ಯ ಅವರ ಮಾಮಾ ಮುತ್ತು ಅವರನ್ನು ವಿವಾಹವಾಗಿದ್ದರು. ತಮಿಳುನಾಡಿನಲ್ಲಿ ಹಿಂದುಳಿದ ವರ್ಗ (ಬಿ.ಸಿ) ಎಂದು ಪಟ್ಟಿ ಮಾಡಲಾದ ರೆಡ್ಡಿ ಸಮುದಾಯದಲ್ಲಿ ರಕ್ತಸಂಬಂಧದೊಳಗೆ ವಿವಾಹಗಳು ಸಾಕಷ್ಟು ಸಾಮಾನ್ಯವಾಗಿದೆ. "ನನ್ನ ತಂದೆಗೆ ಕುಟುಂಬದ ಬಂಧವನ್ನು ಮುರಿಯಲು ಇಷ್ಟವಿರಲಿಲ್ಲ, ಆದ್ದರಿಂದ ಅವರು ನನ್ನನ್ನು ನನ್ನ ಮಾಮಾನಿಗೆ [ತಾಯಿಯ ತಮ್ಮ] ಮದುವೆ ಮಾಡಿಕೊಟ್ಟರು," ಎಂದು ಅವರು ಹೇಳುತ್ತಾರೆ. "ನಾನು ಅವಿಭಕ್ತ ಕುಟುಂಬದೊಡನೆ ಬದುಕುತ್ತಿದ್ದೆ. ನನಗೆ ನಾಲ್ಕು ತಾಯ್ ಮಾಮನ್ [ತಾಯಿಯ ಸಹೋದರರು] ಇದ್ದರು, ನನ್ನ ಪತಿ ಕಿರಿಯರಾಗಿದ್ದರು."
25 ವರ್ಷದವರಾಗಿದ್ದಾಗ, ಶರಣ್ಯ ದೃಷ್ಟಿಹೀನತೆಯಿಂದ ಜನಿಸಿದ ಮೂರು ಮಕ್ಕಳ ತಾಯಿಯಾಗಿದ್ದರು. "ನಾನು ನನ್ನ ಮೊದಲ ಮಗನಿಗೆ ಜನ್ಮ ನೀಡುವವರೆಗೂ ಮಕ್ಕಳು ಆ ರೀತಿ [ದೃಷ್ಟಿಯಿಲ್ಲದೆ] ಜನಿಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ," ಎಂದು ಅವರು ಹೇಳುತ್ತಾರೆ. ಅವನು ಹುಟ್ಟಿದಾಗ ನನಗೆ 17 ವರ್ಷ. ಅವನ ಕಣ್ಣುಗಳು ಗೊಂಬೆಯಂತೆ ಕಾಣುತ್ತಿದ್ದವು. ನಾನು ರೀತಿಯಿರುವ ಹಿರಿಯರನ್ನು ಮಾತ್ರ ನೋಡಿದ್ದೆ."
ಎರಡನೇ ಮಗನನ್ನು ಪಡೆದಾಗ ಆಕೆಗೆ 21 ವರ್ಷ. "ಕನಿಷ್ಠ ಎರಡನೇ ಮಗು ಸಾಮಾನ್ಯವಾಗಿರುತ್ತದೆ ಎಂದು ನಾನು ಭಾವಿಸಿದ್ದೆ, ಆದರೆ ಐದು ತಿಂಗಳಲ್ಲಿ ಈ ಮಗುವಿಗೆ ಸಹ ದೃಷ್ಟಿ ಇಲ್ಲ ಎನ್ನುವುದು ಅರಿವಿಗೆ ಬಂತು," ಎಂದು ಸರಣ್ಯ ಹೇಳುತ್ತಾರೆ. ಎರಡನೇ ಮಗುವಿಗೆ ಎರಡು ವರ್ಷ ವಯಸ್ಸಾಗಿದ್ದಾಗ, ಶರಣ್ಯ ಅವರ ಪತಿ ಅಪಘಾತಕ್ಕೊಳಗಾಗಿ ಕೋಮಾಗೆ ಜಾರಿದರು. ಅವರು ಚೇತರಿಸಿಕೊಂಡಾಗ, ಟ್ರಕ್ ರಿಪೇರಿ ಮಾಡುವ ಸಣ್ಣ ಮೆಕ್ಯಾನಿಕ್ ಅಂಗಡಿಯನ್ನು ಸ್ಥಾಪಿಸಲು ಅವರ ತಂದೆ ಸಹಾಯ ಮಾಡಿದರು.
ಅಪಘಾತದ ಎರಡು ವರ್ಷಗಳ ನಂತರ, ಸರಣ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದರು. "ಅವಳಾದರೂ ಆರೋಗ್ಯವಾಗಿರಬಹುದು ಎಂದು ನಾವು ಭಾವಿಸಿದ್ದೆವು ..." ಎಂದು ಅವರು ಹೇಳುತ್ತಾರೆ ಮತ್ತು "ನಾನು ರಕ್ತ ಸಂಬಂಧಿಯನ್ನು ಮದುವೆಯಾದ ಕಾರಣ ಎಲ್ಲಾ ಮೂರು ಮಕ್ಕಳು ಈ ರೀತಿ ಜನಿಸಲು ಕಾರಣ ಎಂದು ಜನರು ನನಗೆ ಹೇಳಿದರು. ಇದು ಮೊದಲೇ ತಿಳಿದಿದ್ದರೆ ಚೆನ್ನಾಗಿರುತ್ತಿತ್ತು."


ಸರಣ್ಯ ಮತ್ತು ಮುತ್ತು ಅವರ ಮದುವೆಯ ಆಲ್ಬಂನ ಫೋಟೋಗಳು. ವಧು ಶರಣ್ಯ (ಬಲ) ಈ ಚಿತ್ರದಲ್ಲಿ ಸಂಭ್ರಮದಿಂದ ಕಾಣುತ್ತಾರೆ

ಸರಣ್ಯ ಅವರ ಕುಟುಂಬ ಸದಸ್ಯರು ಬೆಳಗಿನ ಹೊತ್ತನ್ನು ಗುಮ್ಮಿಡಿಪೂಂಡಿಯಲ್ಲಿರುವ ತಮ್ಮ ಮನೆಯಲ್ಲಿ ಒಟ್ಟಿಗೆ ಕಳೆಯುತ್ತಾರೆ
ಅವರ ಹಿರಿಯ ಮಗನಿಗೆ ನರವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆ ಇದೆ ಮತ್ತು ಅವನ ವೈದ್ಯಕೀಯ ವೆಚ್ಚಗಳಿಗಾಗಿ ಅವರು ತಿಂಗಳಿಗೆ 1,500 ರೂ.ಗಳವರೆಗೆ ಖರ್ಚು ಮಾಡುತ್ತಾರೆ. ನಂತರ ಇಬ್ಬರೂ ಹುಡುಗರಿಗೆ ವಾರ್ಷಿಕ ಶಾಲಾ ಶುಲ್ಕ 8,000 ರೂ. ಕಟ್ಟಬೇಕು. ಮಗಳ ಶಾಲೆಯು ಶುಲ್ಕವನ್ನು ವಿಧಿಸುವುದಿಲ್ಲ. "ನನ್ನ ಪತಿ ನಮ್ಮನ್ನು ನೋಡಿಕೊಳ್ಳುತ್ತಿದ್ದರು," ಎಂದು ಅವರು ಹೇಳುತ್ತಾರೆ. "ಅವರು ದಿನಕ್ಕೆ 500 ಅಥವಾ 600 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು."
2021ರಲ್ಲಿ ಪತಿ ಹೃದಯಾಘಾತದಿಂದ ನಿಧನರಾದಾಗ, ಸರಣ್ಯ ಅದೇ ಪ್ರದೇಶದಲ್ಲಿರುವ ತನ್ನ ಹೆತ್ತವರ ಮನೆಗೆ ತೆರಳಿದರು. "ಈಗ, ನನ್ನ ಪೋಷಕರು ನನಗಿರುವ ಏಕೈಕ ಬೆಂಬಲ," ಎಂದು ಅವರು ಹೇಳುತ್ತಾರೆ. "ನಾನು ಇದನ್ನು [ಪೋಷಕತ್ವ] ಏಕಾಂಗಿಯಾಗಿ ಪೂರೈಸಬೇಕಾಗಿದೆ."
ಸರಣ್ಯ ಅವರ ತಂದೆ ಪವರ್ಲೂಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮೂಲಕ ತಿಂಗಳಿಗೆ 15,000 ರೂ.ಗಳನ್ನು ಗಳಿಸುತ್ತಾರೆ. ಅವರ ತಾಯಿಗೆ ಪ್ರತಿ ತಿಂಗಳು 1,000 ರೂ.ಗಳ ಪಿಂಚಣಿ ನೀಡಲಾಗುತ್ತದೆ. "ನನ್ನ ತಂದೆಗೆ ವಯಸ್ಸಾಗುತ್ತಿದೆ. ಅವರು ಎಲ್ಲಾ 30 ದಿನಗಳ ಕಾಲ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ ಮತ್ತು ಆದ್ದರಿಂದ ನಮ್ಮ ಖರ್ಚುಗಳನ್ನು ಭರಿಸಲು ಸಾಧ್ಯವಿಲ್ಲ," ಎಂದು ಅವರು ಹೇಳುತ್ತಾರೆ. "ನಾನು ಎಲ್ಲಾ ಸಮಯದಲ್ಲೂ ಮಕ್ಕಳೊಂದಿಗೆ ಇರಬೇಕು, ನನಗೆ ಕೆಲಸ ಸಿಗುವುದಿಲ್ಲ," ಎಂದು ಸರಣ್ಯ ಹೇಳುತ್ತಾರೆ. ಸ್ಥಿರವಾದ ಸರ್ಕಾರಿ ಉದ್ಯೋಗವು ವರಿಗೆ ಸಹಾಯವಾಗಬಲ್ಲದು, ಮತ್ತು ಅವರು ಅದಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಆದರೆ ಏನೂ ಪ್ರಯೋಜನವಾಗಿಲ್ಲ.
ಶರಣ್ಯ ತನ್ನ ಸಮಸ್ಯೆಗಳನ್ನು ಎದುರಿಸಲು ಪ್ರತಿದಿನ ಹೆಣಗಾಡುತ್ತಿರುವಾಗ ಆತ್ಮಹತ್ಯೆ ಆಲೋಚನೆಗಳೂ ಅವರಲ್ಲಿ ಸುಳಿದಾಡುತ್ತದೆ. "ನನ್ನ ಮಗಳು ನನ್ನನ್ನು ಜೀವಂತವಾಗಿರಿಸಿದ್ದಾಳೆ," ಎಂದು ಅವರು ಹೇಳುತ್ತಾರೆ. "ಅವಳು ನನಗೆ ಹೇಳುತ್ತಿದ್ದಳು, 'ನಮ್ಮ ತಂದೆ ನಮ್ಮನ್ನು ತೊರೆದಿದ್ದಾರೆ. ಕನಿಷ್ಠ ನಾವಾದರೂ ಕೆಲವು ವರ್ಷಗಳ ಕಾಲ ಬದುಕಿ ನಂತರ ಹೋಗಬೇಕು'.

ಬಲರಾಮನ್ ತನ್ನ ಮೊಮ್ಮಗಳನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾರೆ . ಹೆತ್ತವರು ಮಾತ್ರವೇ ಸರಣ್ಯರ ಪಾಲಿಗೆ ಇರುವ ಆಸರೆ

ಸ ರಣ್ಯ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಅಡುಗೆ ಮಾ ಡಿ ತನ್ನ ಮಕ್ಕಳನ್ನು ಶಾಲೆಗೆ ಸಿದ್ಧಪಡಿ ಸುತ್ತಾರೆ
![Saranya with her son Manase on her lap. 'My second son [Manase] won't eat if I am not there'](/media/images/08-PAL_6545-PK-Saranyas_search_for_a_silve.max-1400x1120.jpg)
'ಶರಣ್ಯ ತನ್ನ ತೊಡೆಯ ಮೇಲೆ ಮಲಗಿರುವ ತನ್ನ ಮಗ ಎಂ ಮಾನಸೆಯನ್ನು ಮುದ್ದು ಮಾಡುತ್ತಿರುವುದು . 'ನಾನು ಇಲ್ಲದಿದ್ದರೆ ನನ್ನ ಎರಡನೇ ಮಗ ಆಹಾರ ತಿನ್ನುವುದಿಲ್ಲ'

ಗುಮ್ಮಿಡಿಪೂಂಡಿಯಲ್ಲಿರುವ ತನ್ನ ಮನೆಯಲ್ಲಿ ಸೂರ್ಯನ ಬೆಳಕು ಬೀಳುತ್ತಿ ರುವಲ್ಲಿ ಮನಸೆ ನೆಲದ ಮೇಲೆ ಮಲಗಿ ರುವುದು

ಲೆಬಾನಾ ತನ್ನ ಅಣ್ಣಂದಿರಿಗಿಂತ ಹೆಚ್ಚು ಸ್ವತಂತ್ರ ಳು . ಅವಳು ವ್ಯವಸ್ಥಿತಳಾಗಿರುತ್ತಾಳೆ ಮತ್ತು ತನ್ನನ್ನು ತಾನು ನೋಡಿಕೊಳ್ಳಲು ಕಲಿತಿದ್ದಾಳೆ

ಲೆಬನಾ ತನ್ನ ತಾಯಿಯ ಫೋ ನ್ ನಿಂದ ಯೂಟ್ಯೂ ಬ್ ನಲ್ಲಿ ತಮಿಳು ಹಾಡುಗಳನ್ನು ಕೇಳುತ್ತಿದ್ದಾ ಳೆ . ಉಳಿದ ಸಮಯದಲ್ಲಿ ಅವಳು ಅವುಗಳನ್ನು ಹಾಡುತ್ತಾಳೆ

ಮನ ಸೆ ತನ್ನ ಮರದ ಆಟಿಕೆ ಕಾರನ್ನು ಪ್ರೀತಿಸುತ್ತಾನೆ. ಅವನು ಮನೆಯಲ್ಲಿದ್ದಾಗ ತನ್ನ ಹೆಚ್ಚಿನ ಸಮಯವನ್ನು ಅದರೊಂದಿಗೆ ಆಟವಾ ಡುತ್ತಾ ಕಳೆಯುತ್ತಾನೆ

ತಂಗಂ ಆರ್ ತನ್ನ ಮೊಮ್ಮಗ ಮನಸೆ ಜೊತೆ ಆಡುತ್ತಿದ್ದಾರೆ. ಅವರು ದೈಹಿಕವಾಗ ಅಂಗವಿಕಲರಿಗೆ ನೀಡುವ 1,000 ರೂ.ಗಳ ಪಿಂಚಣಿಯನ್ನು ಪಡೆಯುತ್ತಾರೆ, ಅದನ್ನು ಅವರು ತಮ್ಮ ಮೊಮ್ಮಕ್ಕಳಿಗಾಗಿ ಖರ್ಚು ಮಾಡುತ್ತಾರೆ

ಲೆಬಾನಾ ತನ್ನ ಅಜ್ಜಿಯನ್ನು ಸಂತೈಸುತ್ತಿದ್ದಾಳೆ. ಸಹಾನುಭೂತಿಯುಳ್ಳ ಮಗು, ಲೆಬಾನಾ ಇತರರ ಭಾವನೆಗಳಿಗೆ ಸಂವೇದನಾಶೀಲಳಾಗಿ ರುತ್ತಾಳೆ , ಇನ್ನೊಬ್ಬರ ಭಾವನೆಗಳನ್ನು ಅವಳು ಅವರ ಧ್ವನಿಯ ಮೂಲಕ ಗುರುತಿಸುತ್ತಾಳೆ ಮತ್ತು ಅವರಿಗೆ ಪ್ರತಿಕ್ರಿಯಿಸುತ್ತಾಳೆ

ಬಲರಾಮನ್ ತನ್ನ ಮೂವರು ಮೊಮ್ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ರೆ . ಅವರು ಪವರ್ ಲೂಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಮನೆಯಲ್ಲಿದ್ದಾಗ ಮನೆಕೆಲಸಕ್ಕೆ ಸಹಾಯ ಮಾಡುತ್ತಾರೆ

ಬಲರಾಮನ್ (ಎಡ) ಪ್ರತಿದಿನ ಸಂಜೆ ತನ್ನ ಹಿರಿಯ ಮೊಮ್ಮಗ ಮೇಷಕ್ (ಮಧ್ಯ) ನನ್ನು ವಾಕಿಂ ಗ್ ಗಾಗಿ ಟೆರೇಸ್ ಗೆ ಕರೆದೊಯ್ಯು ತ್ತಿದ್ದಾರೆ . ಕೆಲವೊಮ್ಮೆ ಲೆಬಾ ನಾ ಅವರೊಂದಿಗೆ ಸೇರಿಕೊಳ್ಳುತ್ತಾಳೆ, ಈ ಮೂಲಕ ಅವರ ಸಂಜೆ ನಡಿಗೆಯನ್ನು ಸಂಭ್ರಮಿಸುವಂತೆ ಮಾಡುತ್ತಾಳೆ

' ಲೆಬಾನಾ ತಮ್ಮ ಕಟ್ಟಡದ ಟೆರೇಸ್ ಮೇಲೆ ಆಟವಾಡಲು ಇಷ್ಟಪಡುತ್ತಾಳೆ . ಅವಳು ತನ್ನೊಂದಿಗೆ ಆಟವಾಡಲು ಸ್ನೇಹಿತರನ್ನು ಕರೆತರುತ್ತಾಳೆ '

ಗುಮ್ಮಿಡಿಪೂಂಡಿಯಲ್ಲಿರುವ ತಮ್ಮ ಮನೆಯ ಟೆರೇಸ್ ನಲ್ಲಿ ಆಟವಾಡುತ್ತಿರುವಾಗ ಲೆಬಾನಾ ತನ್ನ ತಾಯಿಯ ಬಳಿ ಎತ್ತಿಕೊಳ್ಳುವಂತೆ ಬೇಡಿಕೊಳ್ಳು ತ್ತಿರುವುದು

ದೃಷ್ಟಿಹೀನತೆ ಹೊಂದಿರುವ ತನ್ನ ಮೂವರು ಮಕ್ಕಳಿಗೆ ಆರೈಕೆ ನೀಡುವ ಸವಾಲುಗಳ ಹೊರತಾಗಿಯೂ, ಸ ರಣ್ಯ ಮನೆಯಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ಶಾಂತಿಯನ್ನು ಕಂಡುಕೊಳ್ಳುತ್ತಾ ರೆ

ತನ್ನ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಿದ ನಂತರ, ಸ ರಣ್ಯ ಉಪಾಹಾರ ತಿನ್ನಲು ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಾ ರೆ . ಅವ ರು ಏಕಾಂಗಿಯಾಗಿ ತಿನ್ನಲು ಇಷ್ಟಪಡುತ್ತಾ ರೆ . ಅವರ ಪಾಲಿನ ಖಾಸಗಿ ಕ್ಷಣವೆಂದರೆ ಇದೊಂದೇ

ಸ ರಣ್ಯ ತನ್ನ ಮಗಳೊಂದಿಗೆ ಗುಮ್ಮಿಡಿಪೂಂಡಿಯಲ್ಲಿರುವ ತಮ್ಮ ಮನೆಯ ಹೊರಗೆ ಸಾಬೂನು ಗುಳ್ಳೆಗಳನ್ನು ಗಾಳಿಗೆ ಊದುತ್ತಿದ್ದಾರೆ . 'ನನ್ನ ಮಗಳು ನನ್ನನ್ನು ಜೀವಂತವಾಗಿರಿಸಿದ್ದಾಳೆ'

'ನಾನು ಯಾವಾಗಲೂ ಮಕ್ಕಳೊಂದಿಗೆ ಇರಬೇಕು. ನನಗೆ ಕೆಲಸ ಸಿಗುತ್ತಿಲ್ಲ'
ಈ ವರದಿಯನ್ನು ತಮಿಳಿನಲ್ಲಿ ವರದಿ ಮಾಡಲಾಗಿದ್ದು ಅದನ್ನು ಎಸ್ . ಸೆಂದಳಿರ್ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ .
ಅನುವಾದ : ಶಂಕರ . ಎನ್ . ಕೆಂಚನೂರು