ಪುಣೆ ಜಿಲ್ಲೆಯ ಶಿರೂರು ತಾಲೂಕಿನ ಇಬ್ಬರು ಹೆಂಗಸರು ಹಾಡಿರುವ ಈ 13 ಪದ್ಯಗಳಲ್ಲಿ ಸೀತೆಯ ವನವಾಸ, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ
ರಾಮನಾಮವೆಂದರೆ
ವೀಳ್ಯದೆಲೆ ಅಡಿಕೆಯ ಮೆದ್ದಂತೆ
ಅವನ ಹೆಸರು ಹೇಳಿದರೆ
ಸಿಗುವುದು ಮನಸಿಗೆ ಸಮಧಾನ
ಪುಣೆಯ ಶಿರೂರು ತಾಲ್ಲೂಕಿನ ಸವಿಂದಾನೆ ಗ್ರಾಮದ ರತ್ನಾಬಾಯಿ ಪಡ್ವಾಲ್ ಅವರು ಶ್ರೀರಾಮನ ನೆನಪಿನಲ್ಲಿ ಪದ್ಯವನ್ನು ಹಾಡಿದ್ದಾರೆ. ಅವರ ಹೃದಯದಲ್ಲಿ ಅವನ ಇರುವಿಕೆಯು ಅವರ ಬದುಕಿನ ದೈನಂದಿನ ಜಂಜಡಗಳನ್ನು ಎದುರಿಸುತ್ತಾ ಶಾಂತವಾಗಿ ಬದುಕಲು ಸಹಾಯ ಮಾಡುತ್ತದೆ. ರಾಮಾಯಣವನ್ನು ಕೇಂದ್ರವಾಗಿರಿಸಿಕೊಳ್ಳಲಾದ 13 ಓವಿಗಳನ್ನು ಈ ಸಂಚಿಕೆಯಲ್ಲಿ ಮೂರು ವಿಭಾಗಗಳಲ್ಲಿ ನೀಡಲಾಗಿದ್ದು, ಅದರಲ್ಲಿನ ಮೂರು ಭಕ್ತಿಪೂರ್ವಕ ಹಾಡುಗಳಲ್ಲಿ ಇದೂ ಒಂದು.
ಸೋನುಬಾಯಿ ಮೋಟೆ ಮತ್ತು ರತ್ನಾಬಾಯಿ ಅವರ ಯುಗಳ ದನಿಯಲ್ಲಿ ಮಹಾಕಾವ್ಯದ ದೃಶ್ಯಗಳಲ್ಲಿ ಒಂದರ ನಂತರ ಒಂದರಂತೆ ತೆರೆದುಕೊಳ್ಳಲು ಪ್ರಾರಂಭಿಸಿದವು – ಒಂದು ಹಾಡಿನಲ್ಲಿ ಸೀತೆ ರಥದಲ್ಲಿ ಮಾರುಕಟ್ಟೆಯ ಮೂಲಕ ಹಾದುಹೋಗುವಾಗ ರಾಮನ ಹಣೆಯ ಮೇಲಿನ ಬೆವರನ್ನು ಪ್ರೀತಿಯಿಂದ ಒರೆಸುವ ದೃಶ್ಯದ ವಿವರಣೆಯಿದೆ.
ಮುಂದಿನ ಭಾಗದಲ್ಲಿ ರತ್ನಾಬಾಯಿ ನಮ್ಮನ್ನು ಲಂಕೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ವಾನರ ಸೇನೆಯೊಂದಿಗಿನ ಯುದ್ಧದಲ್ಲಿ ಇಂದ್ರಜಿತು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಮತ್ತು ಅವನ ಹೆಂಡತಿ ಸುಲೋಚನಾ ತನ್ನ ಗಂಡನ ಸಾವಿನ ಲಿಖಿತ ಪುರಾವೆಯನ್ನು ರಾಮನ ಬಳಿ ಕೇಳುತ್ತಾಳೆ. ಕತ್ತರಿಸಿ ಹೋಗಿರುವ ಗಂಡನ ತಲೆ ಅಂಗಳದಲ್ಲೇ ಬಿದ್ದಿದೆ, ಆದರೆ ಅವಳಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯುದ್ಧ ಮುಗಿದ ತಕ್ಷಣ ಕಾದಾಡುತ್ತಿದ್ದ ಎರಡೂ ಬಣಗಳಿಗೆ ಆಗುವ ತುಂಬಲಾರದ ನಷ್ಟವು ಈ ದೃಶ್ಯದಲ್ಲಿ ಅದ್ಭುತವಾಗಿ ಬಿಂಬಿತವಾಗಿದೆ.
ಸೋನುಬಾಯಿ ಸೀತೆಯ ಕಾನನ ವಾಸದ ಹಾಡುಗಳಲ್ಲಿ ಹಾಡತೊಡಗಿದರು, ಅವಳ ಹಣೆಯು ಕುಂಕುಮದಿಂದ (ಸಿಂಧೂರ) ಹೇಗೆ ಮುಚ್ಚಲ್ಪಟ್ಟಿದೆ ಎಂದು ಹೇಳುತ್ತದೆ. ಸೀತೆಯ ಹಣೆಯಲ್ಲಿ ಕುಂಕುಮವಿತ್ತು. ನಿಷ್ಕಳಂಕ ಹೆಣ್ಣು, ಸೀತೆ ಕಾಡಿಗೆ ದೂಡಲ್ಪಟ್ಟಿದ್ದಳು. ಅಂತಹ ಕಾಡಿನ ದಾರಿಯಲ್ಲಿ ಅವಳೊಡನೆ ಇದ್ದಿದ್ದು ಪರಿತ್ಯಕ್ತತೆ, ಒಂಟಿತನ, ಪ್ರಿಯಕರನಿಂದ ದೂರಾದ ನೋವುಗಳು ಮಾತ್ರ. ರಾಮನು ತುಂಬಿದ ಕಣ್ಣುಗಳಿಂದ ಅಸಹಾಯಕನಾಗಿ ಸೀತೆ ತೆರಳುವುದನ್ನು ನೋಡುತ್ತಿದ್ದ. ಹಾಡುಗಾರ್ತಿ ಇಲ್ಲಿ ರಾವಣನ ದುಷ್ಟತನವನ್ನು ಟೀಕಿಸುತ್ತಾಳೆ

'ಅಂತಹ ದಟ್ಟ ಕಾನನದಲ್ಲಿ ಸೀತೆ, ನಿದ್ರೆ ಕಣ್ಣಿಗೆ ಹತ್ತುವುದಾದರೂ ಹೇಗೆ?' ಎಂದು ಕೇಳುತ್ತಾಳೆ ಹಾಡುಗಾರ್ತಿ
ಕಾಡಿನಲ್ಲಿ ನಿರಾಶ್ರಿತಳಾದ, ಜಾನಕಿ ಸೀರೆಯಿಂದ ಡೇರೆಯೊಂದನ್ನು ಕಟ್ಟಿದ್ದಾಳೆ, ಭೂಮಿಯೇ ಅವಳ ಮಂಚ, ಕಲ್ಲಿನ ತುಂಡೇ ದಿಂಬು. ಅಂತಹ ದುಃಖದ ದಿನದಂದು, ಕಾಡಿನ ಬೋರಿ (ಬುಗುರಿ) ಮತ್ತು ಅಕೇಶಿಯಾ ಮರಗಳೇ ಆಕೆಗೆ ಸಾಂತ್ವನ ಹೇಳುವ ಸಹಚರರು. ಸಾಮಾನ್ಯವಾಗಿ ಬಿರುಕು ಬಿಟ್ಟ ತೊಗಟೆಯಿಂದ ಆವೃತವಾಗಿರುವ ಈ ಮುಳ್ಳಿನ ಮರಗಳು ಸಾಮಾನ್ಯವಾಗಿ ಕಾಡಿನ ಸಮೀಪದಲ್ಲಿ ಬೆಳೆಯುತ್ತವೆ ಮತ್ತು ಗ್ರಾಮೀಣ ಮಹಿಳೆಯರು ತಮ್ಮ ಪರಿಸ್ಥಿತಿಗೆ ರೂಪಕವಾಗಿ ಇವುಗಳನ್ನು ಬಳಸುತ್ತಾರೆ. ಇದು ಸಮಾಜದಲ್ಲಿ ಹೆಣ್ಣು ಎದುರಿಸುವ ಅಸಮಾನತೆ ಮತ್ತು ಹಿಂಸೆಗಳನ್ನು ಪ್ರತಿನಿಧಿಸುತ್ತದೆ.
ರಾಮಾಯಣ ಪಾರಾಯಣದ ಮುನ್ನುಡಿಯಲ್ಲಿ ಸಿ. ರಾಜಗೋಪಾಲಾಚಾರಿ ಬರೆಯುತ್ತಾರೆ: "ಸೀತೆಯ ಸಂಕಟ ರಾಮಾಯಣದೊಂದಿಗೆ ಕೊನೆಗೊಳ್ಳುವುದಿಲ್ಲ. ಇಂದಿಗೂ ನಮ್ಮ ನಡುವಿನ ಮಹಿಳೆಯರ ಬದುಕಿನಲ್ಲಿ ನಿರಂತರವಾಗಿ ಬೇರೂರಿದೆ." ಅಗ್ನಿಪರೀಕ್ಷೆಯಿಂದ ಇಡೀ ಪ್ರಪಂಚದ ಮುಂದೆ ತನ್ನ ಪರಿಶುದ್ಧತೆಯನ್ನು ಸಾಬೀತುಪಡಿಸಿದ ನಂತರವೂ ಸೀತೆಯನ್ನು ಕಾಡಿನ ಮಧ್ಯದಲ್ಲಿ ವನವಾಸಕ್ಕೆಂದು ಕಳುಹಿಸಲಾಗುತ್ತದೆ. ಅವರು ಹೇಳುವಂತೆ “ಇದು ದನಿಯಿಲ್ಲದ ಮಹಿಳೆಯರ ಬದುಕಿನ ಕೊನೆಯಿಲ್ಲದ ಯಾತನೆಯ ಪ್ರತಿಬಿಂಬವಾಗಿದೆ.”
ರಾಮಾಯಣದ ಪ್ರಕಾರ, ಸೀತೆ, ರಾಮ ಮತ್ತು ಲಕ್ಷ್ಮಣರು ಪಂಚವಟಿ ಕಾಡಿನಲ್ಲಿ 14 ವರ್ಷಗಳನ್ನು ಕಳೆದರು. ಅನೇಕರ ಪ್ರಕಾರ, ಈ ಸ್ಥಳವು ಇಂದಿನ ಮಹಾರಾಷ್ಟ್ರದ ನಾಸಿಕ್ ಬಳಿಯಿದೆ. ಈ ಹಾಡುಗಾರರ ಕಲ್ಪನೆಯಲ್ಲಿ ಉತ್ತರಕಾಂಡದಲ್ಲಿ ವರ್ಣಿಸಿದ ಸೀತೆಯ ಏಕಾಂಗಿ ವನವಾಸದ ಬದುಕು ಪದ್ಯರೂಪದಲ್ಲಿ ಮೂಡಿಬಂದಿದೆ. ಇಲ್ಲಿ ಸೀತೆ ತನ್ನ ಅವಳಿ ಮಕ್ಕಳಾದ ಲಾಹು ಮತ್ತು ಅಂಕುಸ್ (ಲವ-ಕುಶ)ರಿಗಾಗಿ ಜೋಗುಳವನ್ನು ಹಾಡುತ್ತಾಳೆ.
ಕೊನೆಯ ಮೂರು ಪದ್ಯಗಳಲ್ಲಿ ಸೀತಾ ಮತ್ತು ರಾಮನ ಮಕ್ಕಳಿಗೆ ಭಕ್ತಿ ಮತ್ತು ಪ್ರೀತಿಯನ್ನು ತೋರ್ಪಡಿಸುತ್ತಾರೆ. ಗೋದಾವರಿ ನದಿಯ ದಡದಲ್ಲಿನ ಅತ್ಯಂತ ಪವಿತ್ರ ಸ್ಥಳವಾದ ರಾಮಕುಂಡದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಸ್ನಾನ ಮಾಡಲು ಹೇಗೆ ಬರುತ್ತಾರೆ ಎಂದು ಗಾಯಕರು ಹೇಳುತ್ತಾರೆ. ಅಯೋಧ್ಯೆಯಿಂದ ಹೊರಹಾಕಲ್ಪಟ್ಟ ನಂತರ, ರಾಮಚಂದ್ರನು ಸೀತೆ ಮತ್ತು ಲಕ್ಷ್ಮಣನೊಂದಿಗೆ ಸ್ನಾನ ಮಾಡಲು ಇಲ್ಲಿಗೆ ಬರುತ್ತಿದ್ದನು ಎಂದು ಹಿಂದೂಗಳು ದೃಢವಾಗಿ ನಂಬುತ್ತಾರೆ.
ಈ ಹದಿಮೂರು ದ್ವಿಪದಿಗಳಲ್ಲಿ ರತ್ನಾಬಾಯಿ ಪಡ್ವಾಲ್ ಮತ್ತು ಸೋನುಬಾಯಿ ಮೋಟೆ ಅವರು ಪುರುಷೋತ್ತಮ ರಾಮನ ಪೂಜೆ ಮಾಡುತ್ತಲೇ ಅವನ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಸೀತೆಯದಷ್ಟೇ ಅಲ್ಲದೆ, ಸುಲೋಚನಳ ನೋವು, ಪ್ರೀತಿಯನ್ನು ಎತ್ತಿ ತೋರಿಸುತ್ತಾ, ಯುದ್ಧಗಳಿಂದ ಎರಡು ದೇಶಗಳು ಅನುಭವಿಸುವ ಕಷ್ಟನಷ್ಟಗಳನ್ನು ನಮ್ಮೆದುರಿಗಿರಿಸುತ್ತಾರೆ.
ರಾಮ, ರಾಮ ನನ್ನ
ಕೊರಳ ಸುತ್ತಲೂ ತಾಯತದಂತೆ ಇರುವ
ಜನರಿಗೆ ತಿಳಿದಿಲ್ಲ
ಅವನನ್ನು ಕೊರಳ ಹಾರ ಮಾಡಿಕೊಂಡಿರುವುದು
ರಾಮ ನನ್ನೊಡನೆ
ಇರುವ, ಎಷ್ಟು ಒಳ್ಳೆಯ ಸ್ನೇಹಿತನವನು
ನನ್ನ ಹೃದಯದಲ್ಲಿ
ಮಹಲನ್ನೇ ಕಟ್ಟಿರುವ ಅವನು
ರಾಮ ಎಳೆಯ ಅಡಿಕೆಯ
ಚೂರಿನಂತೆ ಹಿತ
ಅವನ ಹೆಸರು ಹೇಳಿ
ಪಡೆಯುತ್ತೇನೆ ಆರಾಮ
ಬೆವರುತ್ತಿರುವ
ರಾಮ, ಸೀರೆಯ ಸೆರಗಿಂದ ಅವನ ಹಣೆಯ ಒರೆಸುವಳು ಸೀತೆ
“ಯಾರ ದೃಷ್ಟಿ
ಬಿದ್ದಿತು?” ಕೇಳುತ್ತಾಳೆ, ಬಾಜಾರಿನ ನಡುವೆ ರಥ ಸಾಗುವಾಗ
ಬೆವರುತ್ತಿರುವ
ರಾಮ, ಅವನ ಹಣೆಯ ಒರೆಸುವಳು ಸೀತೆ
“ಯಾರ ಕೆಟ್ಟ
ದೃಷ್ಟಿ ಬಿತ್ತು ನಿನಗೆ, ನನ್ನ ರಾಮರಾಯ?”
* * *
ಇಂದ್ರಜಿತುವನು
ಕೊಲ್ಲಲಾಯಿತು, ಅವನ ಹೆಣ ಬಿದ್ದಿತ್ತು ಮನೆಯಂಗಳದಲ್ಲಿ
ನಂಬಲಾಗುತ್ತಿಲ್ಲ
ಸಂಕಟದಲ್ಲಿರುವ ಸುಲೋಚನೆಗೆ, ಕೇಳುತ್ತಿದ್ದಾಳೆ ಬರವಣಿಗೆಯಲ್ಲಿ ಕೊಡುವಂತೆ
ಸೀತೆ
ವನವಾಸಕ್ಕೆಂದು ಹೊರಟಳು, ಹಣೆಯು ಕುಂಕುಮ ಹೊಳೆಯುತ್ತಿತ್ತು.
ದೂರ
ನಿಂತ ಶ್ರೀರಾಮನನ್ನು ನೋಡಿ ಕಣ್ಣುಗಳು ತುಂಬಿ
ತುಳುಕುತ್ತಿತ್ತು
ಸೀತೆ
ವನವಾಸಕ್ಕೆಂದು ಹೊರಟಳು, ದನವೊಂದು ಅವಳನ್ನು ದಾಟಿದೆ
ಪಾಪಿ ರಾವಣನೇ
ಕಾರಣನು ಈ ದೀರ್ಘ ವನವಾಸಕ್ಕೆ
ಇಷ್ಟು ದಟ್ಟ
ಕಾಡಿನಲ್ಲಿ ಅಳುತ್ತಿರುವುದು ಯಾರು?ʼ ಕೇಳು!
ಬುಗುರಿ, ಜಾಲಿಯ
ಮರಗಳು
ಕೇಳುತ್ತಾ ಸಂತೈಸುತ್ತಿವೆ
ಹೆಣ್ಣು ಜೀವಗಳಂತೆ
ಇಷ್ಟು ದಟ್ಟ
ಕಾಡಿನಲ್ಲಿ, ಜೋಗುಳ ಹಾಡುತ್ತಿರುವುದ್ಯಾರಲ್ಲಿ?
ಸೀತೆ ಹೇಳುತ್ತಾಳೆ,
“ಲಹು ಮತ್ತು ಅಂಕುಸ್ ಮಲಗಿದ್ದಾರೆ”
ಇಷ್ಟು ದಟ್ಟ
ಕಾಡಿನಲ್ಲಿ, ಓ, ಸೀತೆ, ನೀ ಹೇಗೆ ಮಲಗುವೆ?
ಕಲ್ಲನ್ನೇ ನಿನ್ನ
ತಲೆಯಡಿಗೆ ದಿಂಬಾಗಿಸಿಕೊಂಡು
ಈ ದಟ್ಟ ಕಾಡಿನಲ್ಲಿ,
ಏನದು ಕೆಂಪಗೆ ಕಾಣುವುದು
ಸೀರೆಯ ಬಳಸಿ
ಡೇರೆ ಹೂಡಿದ್ದಾಳೆ ಸೀತೆ
* * *
ರಾಮಕುಂಡದ ಬಳಿ
ಗುಲಾಲು ತಂದಿಟ್ಟವರು ಯಾರು?
ಪಂಚವಟಿಯಿಂದ
ಸ್ನಾನಕ್ಕೆ ಬಂದಂತಹ ತುಂಟ ಮಕ್ಕಳು [ಲವ-ಕುಶ]
ರಾಮಕುಂಡದ ಬಳಿ
ಅಡಿಕೆ ಒಪ್ಪಿಸಿದವರ್ಯಾರು?
ನಡು ಮಧ್ಯಾಹ್ನ
ಸ್ನಾನಕ್ಕೆ ಬಂದಿಹರು ಲಹು- ಅಂಕುಸ್
ರಾಮಕುಂಡದ ಬಳಿ
ಎರಡು ನೆನೆದ ಧೋತಿಗಳಿವೆ
ಲಹು-ಅಂಕುಸರೆಂಬ
ಅವಳಿಗಳು ಮೀಯಲು ಬರುವರು

ಪ್ರದರ್ಶಕಿ/ಗಾಯಕಿ : ಸೋನುಬಾಯಿ ಮೋಟೆ
ಗ್ರಾಮ : ಸವಿಂದಾನೆ
ತಾಲೂಕು : ಶಿರೂರು
ಜಿಲ್ಲೆ : ಪುಣೆ
ಉದ್ಯೋಗ : ಕೃಷಿ ಮತ್ತು ಗೃಹಿಣಿ
ಜಾತಿ : ಮರಾಠಾ
ಪ್ರದರ್ಶಕಿ/ಗಾಯಕಿ : ರತ್ನಾಬಾಯಿ ಪಡ್ವಾಲ್
ಗ್ರಾಮ : ಸವಿಂದಾನೆ
ತಾಲೂಕು : ಶಿರೂರು
ಜಿಲ್ಲೆ : ಪುಣೆ
ಉದ್ಯೋಗ : ಕೃಷಿ ಮತ್ತು ಗೃಹಿಣಿ
ಜಾತಿ : ಮರಾಠಾ
ದಿನಾಂಕ : ಈ ಹಾಡುಗಳನ್ನು ಮೊದಲು ಡಿಸೆಂಬರ್ 13, 1995ರಂದು ರೆಕಾರ್ಡ್ ಮಾಡಲಾಯಿತು
ಪೋಸ್ಟರ್: ಊರ್ಜಾ
ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರಿಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಬಗ್ಗೆ ಇಲ್ಲಿ ಓದಿ.
ಅನುವಾದ: ಶಂಕರ ಎನ್. ಕೆಂಚನೂರು